Spread the love

ರಾಯಚೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಮನೆಯಿಂದಲೇ ಮತದಾನ ಮಾಡಿದ ಕೇವಲ ಅರ್ಧ ಗಂಟೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ನಡೆದಿದೆ.

ಮೃತರು ಅಲಬನೂರು ಗ್ರಾಮದ ಮಂಗಮ್ಮ (82) ಆಗಿದ್ದಾರೆ. ಅವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದು, ಅದರಂತೆ ಮೇ 3ರಂದು ಮಂಗಮ್ಮ ಅವರ ಮನೆಗೆ ಚುನಾವಣಾ ಸಿಬ್ಬಂದಿ ತೆರಳಿದ್ದರು. ಮಧ್ಯಾಹ್ನ ಸುಮಾರು 12.19ರ ವೇಳೆಗೆ ಮಂಗಮ್ಮ ಮತದಾನ ಮಾಡಿದ್ದರು. ಮಧ್ಯಾಹ್ನ 12.50ಕ್ಕೆ ಅಸುನಿಗಿದ್ದಾರೆ.

ಮಂಗಮ್ಮ ಅವರ ಮನೆಗೆ ಬುಧವಾರ ಪಿಆರ್​ಒ ದಿನೇಶ ಕೆಪಿ ಹಾಗೂ ಎಪಿಆರ್​​ಒ ಬಸಪ್ಪ ಹೆಚ್ ಹಾಗೂ ಇತರ ಸಿಬ್ಬಂದಿ ತೆರಳಿದ್ದರು. 349 ಸಂಖ್ಯೆಯ ಮತಪತ್ರವನ್ನು ಮಂಗಮ್ಮ ಅವರಿಗೆ ನೀಡಲಾಗಿತ್ತು. ಈ ವಿಚಾರವನ್ನು ಚುನಾವಣಾಧಿಕಾರಿ ಅರುಣ ಹೆಚ್ ದೃಢಪಡಿಸಿದ್ದಾರೆ.

ಮತ ಚಲಾಯಿಸಿದ್ದ ಶತಾಯುಷಿ ಅಜ್ಜನಿಗೆ ಆಯೋಗ, ಮೋದಿ ಮೆಚ್ಚುಗೆ

ಬೆಳಗಾವಿಯಲ್ಲಿ 103 ವರ್ಷದ ವೃದ್ಧ ಮಹಾದೇವ ಮಹಾಲಿಂಗ ಮಾಳಿ ಮನೆಯಿಂದಲೇ ಮತದಾನ ಮಾಡಿದ್ದಕ್ಕೆ ಅವರನ್ನು ಮಂಗಳವಾರ ಕೇಂದ್ರ ಚುನಾವಣಾ ಆಯೋಗ ಶ್ಲಾಘಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಕೂಡ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಬುಧವಾರ ಟ್ವೀಟ್ ಮಾಡಿದ್ದರು.

ರಾಜ್ಯದಲ್ಲಿ ಇದೇ ಮೊದಲ ಬಾರಿ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಅಂಗವಿಕಲರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಚುನಾವಣಾ ಅಯೋಗದ ಸಿಬ್ಬಂದಿ ಅವರ ಮನೆ ಬಾಗಿಲಿಗೆ ತೆರಳಿ ಬ್ಯಾಲೆಟ್ ಪೇಪರ್ ನೀಡುತ್ತಾರೆ. ಮತದಾನದ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುತ್ತದೆ. ಮತದಾನದ ನಂತರ ಮತ ಪೆಟ್ಟಿಗೆಗಳನ್ನು ಈಗಾಗಲೇ ಮೀಸಲಿಟ್ಟಿರುವ ಸ್ಟ್ರಾಂಗ್ ರೂಮ್​​ಗೆ ಶಿಪ್ಟ್ ಮಾಡಲಾಗುತ್ತದೆ. ಈ ಎಲ್ಲಾ ಮತಗಳನ್ನೂ ಮೇ 13 ರಂದು ಮತ ಏಣಿಕೆ ದಿನ ಓಪನ್ ಮಾಡಲಾಗುತ್ತದೆ.

Leave a Reply

Your email address will not be published. Required fields are marked *