ಹುಬ್ಬಳ್ಳಿ: ಜಗದೀಶ ಶೆಟ್ಟರ್ ನಂಬಿಕೆ ಹಾಗೂ ವಿಶ್ವಾಸ ದ್ರೋಹ ಮಾಡಿದ್ದಾರೆ. ಸ್ವತಃ ಅಮಿತ ಶಾ ಅವರು ಕರೆ ಮಾಡಿ ಅವರನ್ನು ಕೇಂದ್ರ ಸಚಿವರನ್ನಾಗಿ, ಅವರ ಶ್ರೀಮತಿಯವರಿಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರೂ ನಂಬಿಕೆ ದ್ರೋಹ ಮಾಡಿ ಹೋಗಿದ್ದಾರೆ. ಅವರು ಜೀವನದಲ್ಲಿ ನೆನಪಿಡುವಂತಹ ಸೋಲನ್ನು ಕ್ಷೇತ್ರದ ಮತದಾರರು ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ಲಿಂಗಾರಾಜ ನಗರದ ಸಭಾಭವನದಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡುವ ವೇಳೆ ಮಾತನಾಡಿ, ಶೆಟ್ಟರ್ ಅವರಿಗೆ ರಾಜ್ಯಾಧ್ಯಕ್ಣರನ್ನಾಗಿ, ವಿಪಕ್ಷ ನಾಯಕನ್ನಾಗಿ, ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಆದರೆ ಪಕ್ಷಕ್ಕೆ ಚೂರಿ ಹಾಕಿ ಹೋಗಿದ್ದೀರಿ. ನಿಮ್ಮ ಜೀವನದಲ್ಲಿ ನೋಡಲಾರದ ಸೋಲು ಅನುಭವಿಸಲಿದ್ದೀರಿ. ಕಾರ್ಯಕರ್ತರು ಅವರು ಮಾಡಿರುವ ಮೋಸ, ದ್ರೋಹವನ್ನು ಕ್ಷೇತ್ರದ ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಇನ್ನೂ ಹತ್ತು ದಿನ ಪ್ರಾಮಾಣಿಕ ಹಾಗೂ ವಿಶ್ರಾಂತಿ ಇಲ್ಲದೆ ಕೆಲಸ ಮಾಡಿ ಎಂದರು.
ಲಕ್ಷ್ಮಣ ಸವದಿ ಅವರಿಗೆ ಇನ್ನೂ ಐದು ವರ್ಷದ ವಿಧಾನಪರಿಷತ್ತು ಸದಸ್ಯತ್ವ ಬಿಟ್ಟು ಕಾಂಗ್ರೆಸ್ ಗೆ ಹೋಗಿದ್ದಾರೆ. ಸೋತವರಿಗೆ ಎಂಎಲ್ ಸಿ ಮಾಡಿ ಉಪಮುಖ್ಯಮಂತ್ರಿ ಮಾಡಿದ್ದೆ. ಇಬ್ಬರೂ ಚೂರಿ ಹಾಕಿ ಹೋಗಿದ್ದಾರೆ. ದ್ರೋಹ ಮಾಡಿದವರನ್ನು ನಿಮ್ಮ ಮನೆಗೆ ಸೇರಿಸಬೇಡಿ. ನಡ್ಡಾ, ಮೋದಿ, ಶಾ ಎಲ್ಲರೂ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎನ್ನುವ ಸಂಕಲ್ಪವಿದೆ. ಯುವಕರು ಮನಸ್ಸು ಮಾಡಿ ಬಿಜೆಪಿ ಅಧಕಾರಕ್ಕೆ ತರಬೇಕು ಎಂದು ಶೆಟ್ಟರ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.