ಕೋಲಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಿದರೆ ರಾಜಕೀಯ ಮಾಡುತ್ತೇನೆ, ಇಲ್ಲವಾದರೆ ಈಗಲೇ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತೇನೆಂದು ಶಾಸಕ ಕೆ.ಶ್ರೀನಿವಾಸಗೌಡ ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರ ಜಿಲ್ಲೆಯು ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಿತ್ತು, ಇದೀಗ ಸಿದ್ದರಾಮಯ್ಯ ಮೂಲಕ ಎರಡನೇ ಮುಖ್ಯಮಂತ್ರಿಯನ್ನು ಕೊಡಬೇಕೆಂಬ ಆಸೆ ಇತ್ತು, ಆದರೆ, ಇದೀಗ ಅದು ಕರಗುವಂತಾಗಿದೆ. ಆದರೂ, ಇನ್ನೂ ಅಂತಿಮ ಘೋಷಣೆಯಾಗಿಲ್ಲ, ಕಾದು ನೋಡುತ್ತೇನೆಂಬ ಆಶಾ ಭಾವನೆ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲವೆಂದರೂ ತಾವು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲವೆಂದು ಸ್ಪಷ್ಟಪಡಿಸಿದ ಅವರು, ನಾನು ಸಿದ್ದರಾಮಯ್ಯ ಜತೆ ಈ ವಿಚಾರವಾಗಿ ಮಾತನಾಡೋದಿಲ್ಲ. ಬೇಕಾದರೆ ಅವರೇ ಮಾತನಾಡಿಸಲಿ, ನಾನಂತೂ ಸಿದ್ದರಾಮಯ್ಯ ಜತೆ ಮಾತನಾಡೋದಿಲ್ಲ ಎಂದು ಮುನಿಸು ವ್ಯಕ್ತಪಡಿಸಿದರು.
ನನ್ನನು ಕರೆದು ಮಾತಾಡಿದ ಬಳಿಕ ಕ್ಷೇತ್ರ ಬಿಟ್ಟು ಕೊಟ್ಟಿದ್ದೇನೆ. ಇದೀಗ ನನ್ನನ್ನು ಏನೂ ಕೇಳದೆ ಈ ನಿರ್ಧಾರ ತೆಗೆದುಕೊಂಡರೆ ಮಾತನಾಡುವ ಆವಶ್ಯಕತೆ ಇಲ್ಲ.ನಾನು ಅವರಷ್ಟು ದೊಡ್ಡ ಮಟ್ಟದಲ್ಲಿ ರಾಜಕೀಯವಾಗಿ ಬೆಳೆದಿಲ್ಲ, ಅವರ ಜೊತೆ ಮಾತನಾಡುವ ಅವಶ್ಯಕತೆ ಇಲ್ಲ ಎಂದರು.
ಕಾಣದ ಕೈ ಹೈಕಮಾಂಡ್ನಲ್ಲಿ ಕೆಲಸ ಮಾಡಿದೆಯೆಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದರು.