Spread the love

ಜೈಪುರ: ಬಾತ್‌ ರೂಮ್‌ ನಲ್ಲಿ  ಸ್ನಾನ ಮಾಡುವಾಗ ಉಸಿರುಗಟ್ಟಿ ದಂಪತಿಗಳಿಬ್ಬರು ಮೃತಪಟ್ಟು, 5 ವರ್ಷದ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ದಾರುಣ ಘಟನೆ ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ನಡೆದಿದೆ.

ಶಹಾಪುರ ನಿವಾಸಿಗಳಾದ ಶಿವನಾರಾಯಣ ಜಾನ್ವಾರ್ (37), ಅವರ ಪತ್ನಿ ಕವಿತಾ ಜಾನ್ವರ್ (35) ಮೃತ ದಂಪತಿಗಳು. ಮಗ ವಿಹಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

ದಂಪತಿಗಳು ಹಾಗೂ ಕುಟುಂಬ ಸದಸ್ಯರು ಶೀತಲ ಅಷ್ಟಮಿ ಹಬ್ಬದ ಪ್ರಯುಕ್ತ ಬಣ್ಣದಲ್ಲಿ ಆಡಿದ್ದರು. ಆದಾದ ಬಳಿಕ ಬಣ್ಣವನ್ನು ತೊಳೆಯಲು ತಮ್ಮ 5 ವರ್ಷದ ಮಗನನ್ನು ಕರೆದುಕೊಂಡು ದಂಪತಿಗಳು ಬಾತ್‌ ರೂಮ್‌ ಗೆ ತೆರಳಿದ್ದಾರೆ. ಈ ವೇಳೆ ಗೀಸರ್‌ ಆನ್‌ ಮಾಡಿದ್ದಾರೆ. ಕೆಲವೇ ಕ್ಷಣದಲ್ಲಿ ಗೀಸರ್‌ ಅನಿಲ ಸೋರಿಕೆಯಾಗಿದೆ. ಏಕಾಏಕಿ ಗೀಸರ್‌ ಗ್ಯಾಸ್‌ ಲೀಕ್‌ ಆದ ಪರಿಣಾಮ ದಂಪತಿಗಳಿಗೆ ಉಸಿರುಗಟ್ಟಿ ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದಾದ ಕೆಲ ಸಮಯದ ಬಳಿಕ ಕುಟುಂಬದ ಇತರ ಸದಸ್ಯರು ಬಾಗಿಲು ಬಡಿದು ಕರೆಯಲು ಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆ ಬಾಗಿಲು ಒಡೆದು ನೋಡಿದ್ದಾರೆ. ನೋಡುವಾಗ ಮೂವರು ಪ್ರಜ್ಞೆ ತಪ್ಪಿ ಬಿದ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮೂವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಇದರಲ್ಲಿ ದಂಪತಿಗಳು ಮೃತಪಟ್ಟಿದ್ದು,ಮಗ ವಿಹಾನ್‌ ಬದುಕುಳಿದಿದ್ದಾರೆ ಎಂದು ಘಟನೆ ಬಗ್ಗೆ ಪೊಲೀಸರು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ‌ ಹೋಳಿ  ಹಬ್ಬದ ಬಣ್ಣವನ್ನು ತೊಳೆಯಲು ಹೋಗಿ ಬಾತ್‌ ರೂಮ್‌ ನಲ್ಲಿ ಗೀಸರ್‌ ಸೋರಿಕೆಯಾಗಿ ದಂಪತಿಗಳು ಉಸಿರುಗಟ್ಟಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿತ್ತು.

 

 

Leave a Reply

Your email address will not be published. Required fields are marked *