ಶಿವಮೊಗ್ಗ : ಮಾಚೇನಹಳ್ಳಿ ಮೆಸ್ಕಾಂ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ನೀತಿಗೆರೆ ತಾಂಡದ ಯುವಕ ಕಿರಣ್ ಎಂಬುವವರು ಮಾಚೇನಹಳ್ಳಿ ಶಾಖೆಯಲ್ಲಿ ಕೈಗಾರಿಕಾ ಪ್ರದೇಶಗಳ ಲೈನ್ ದುರಸ್ತಿ ಮಾಡುವ ಸಮಯದಲ್ಲಿ ವಿದ್ಯುತ್ ತಗಲಿ ಸಾವನಪ್ಪಿದ್ದು ಇದಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಈ ಕೂಡಲೇ ನಿರ್ಲಕ್ಷ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಬಂಜಾರ ಯುವಕರ ಮತ್ತು ವಿದ್ಯಾರ್ಥಿ ಸಂಘದ ರಾಜ್ಯಾಧ್ಯಕ್ಷ ಗಿರೀಶ್ ಡಿ ಆರ್ ಆಗ್ರಹಿಸಿದ್ದಾರೆ.
ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎಂದಿನಂತೆ ವಿದ್ಯುತ್ ಸ್ಥಗಿತಗೊಳಿಸಿ 11 ಕೆ ವಿ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ ಲೈನ್ ಮ್ಯಾನ್ ಕಿರಣ್ ಮತ್ತು ಆತನ ಸಹೋದ್ಯೋಗಿ ಸುನಿಲ್ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಲೈನ್ ಚಾರ್ಜ್ ಮಾಡಲಾಗಿದೆ ಇದರಿಂದಾಗಿ ಕಿರಣ್ ಸ್ಥಳದಲ್ಲೇ ಸಾವನಪ್ಪಿದ್ದು ಆತನ ಸಹೋದ್ಯೋಗಿ ಸುನಿಲ್ ಗಂಭೀರವಾಗಿ ಗಾಯಗೊಂಡಿದ್ದಾರೆ ವಿದ್ಯುತ್ ಸ್ಥಗಿತ ಮಾಡಿ ಕೆಲಸ ಮಾಡುತ್ತಿದ್ದರು ಕೂಡ ಲೈನ್ ಚಾರ್ಜ್ ಆಗಿದ್ದು ಹೇಗೆ ಎಂಬುದು ನಿಗೂಢವಾಗಿದೆ ಮೆಸ್ಕಾಂನ ಅಧಿಕಾರಿಗಳಿಗೆ ಇದರ ಬಗ್ಗೆ ಮಾಹಿತಿ ಕೇಳಿದರೆ ಉಡಾಫೆ ಯ ಉತ್ತರ ನೀಡುತ್ತಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಸೂಪರಿಂಟೆಂಡೆಂಟ್ ಇಂಜಿನಿಯರ್ ಅವರು ಎಷ್ಟು ಸ್ಥಾವರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಬೇಕು ಮತ್ತು ಈ ಹಿಂದೆ ವಿನೋಬಾನಗರದಲ್ಲಿ ಕೆಲಸದ ಸಂದರ್ಭದಲ್ಲಿ ಮೃತಪಟ್ಟ ಲೈನ್ ಮ್ಯಾನ್ ಹಾಲಸ್ವಾಮಿ ಅವರ ವಿಚಾರದಲ್ಲಿ ತಕ್ಷಣ ಸ್ಪಂದಿಸಿದ ಇವರು ಈಗ ಕಿರಣ್ ವಿಚಾರದಲ್ಲಿ ಅಸಡ್ಡೆ ತೋರುತ್ತಿರುವುದು ಏಕೆ ಎಂಬುದು ಸ್ಪಷ್ಟವಾಗಬೇಕಿದೆ ಎಂದು ತಿಳಿಸಿದರು.
ಈ ಘಟನೆಯ ಬಗ್ಗೆ ಸಮಗ್ರವಾಗಿ ತನಿಖೆಯಾಗಿ ಕರ್ತವ್ಯ ಲೋಪ ಎಸಗಿರುವ ಮೆಸ್ಕಾಂ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಂಡು ವಜಾ ಗೊಳಿಸಬೇಕೆಂದು ಆಗ್ರಹಿಸಿದರು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಲಾಗುವುದೆಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಬಂಜಾರ ಸಮುದಾಯದ ಮುಖಂಡರುಗಳಾದ ಕೃಷ್ಣ ನಾಯ್ಕ್ ,ಜಯ ನಾಯ್ಕ್ ,ಜಗದೀಶ್ ರಾನಡೆ,ಅಭಿರಾಮ್ ಇದ್ದರು