Spread the love

ಚೆನ್ನೈ: ರಸಂ ತಯಾರಿಸುತ್ತಿದ್ದ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ದೊಡ್ಡ ಹಂಡೆಯೊಳಗೆ ಬಿದ್ದಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

ಮೃತ ದುರ್ದೈವಿ ಕಾಲೇಜು ವಿದ್ಯಾರ್ಥಿಯಾಗಿದ್ದು, ಈತ ರಜೆಯ ಹಿನ್ನೆಲೆಯಲ್ಲಿ ಕೆಟರಿಂಗ್‌ ಸಂಸ್ಥೆಯಲ್ಲಿ ಅರೆಕಾಲಿಕ ಉದ್ಯೋಗ ಮಾಡುತ್ತಿದ್ದ. ಕಳೆದ ವಾರ ವಿವಾಹ ಸಮಾರಂಭವೊಂದರಲ್ಲಿ ಅತಿಥಿಗಳಿಗೆ ಊಟ ಬಡಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಡುಗೆ ಚಪ್ಪರದಲ್ಲಿ ರಸಂ ಕುದಿಸುತ್ತಿದ್ದ ದೊಡ್ಡ ಹಂಡೆಯೊಳಗೆ ಯುವಕ ಬಿದ್ದಿದ್ದು, ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ಮೃತನನ್ನು ಎನ್ನೋರ್‌ ಸಮೀಪದ ಪುದುನಗರ್‌ ನ ಅಥಿಪಟ್ಟು ನಿವಾಸಿ ವಿ.ಸತೀಶ್‌ ಎಂದು ಗುರುತಿಸಲಾಗಿದೆ. ಈತ ಕೊರುಕ್ಕುಪೇಟ್‌ ನ ಖಾಸಗಿ ಕಾಲೇಜಿನ ಬಿಸಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಪ್ರಕರಣದ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *