ರಾಜಸ್ಥಾನ್: ದುಬಾರಿ ಹಣ ಕೊಟ್ಟು ಖರೀದಿಸಿದ ಕಾರು ಒಂದು ತಿಂಗಳಲ್ಲಿಯೇ ಬಹಳಷ್ಟು ತಾಂತ್ರಿಕ ದೋಷ ಕಂಡು ಬಂದಿದ್ದವು. ಕಾರು ಮಾಲೀಕ ಶೋರೂಂನವರ ಬಳಿ ವಿಷಯ ತಿಳಿಸಿ ತಾಂತ್ರಿಕ ದೋಷ ಸರಿಪಡಿಸುವಂತೆ ತಿಳಿಸಿದ್ದ, ಆದರೆ ಶೋರೂಂನವರು ಸಮರ್ಪಕವಾಗಿ ಸ್ಪಂದಿಸದ ಕಾರಣ ಆಕ್ರೋಶಗೊಂಡು ಎರಡು ಕತ್ತೆಯನ್ನು ಬಳಸಿ ಕಾರನ್ನು ಶೋರೂಂಗೆ ಎಳೆದು ತಂದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನದ ರಣಬಿಸಿಲು ಹಾಗೂ ಸಂಚಾರ ದಟ್ಟಣೆಯ ನಡುವೆಯೇ ಎರಡು ಕತ್ತೆಗಳನ್ನು ಬಳಸಿ ಐಶಾರಾಮಿ ಕಾರನ್ನು ಶೋರೂಂಗೆ ಎಳೆದು ತರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಯ ಪ್ರಕಾರ, ಕಾರು ಮಾಲೀಕನನ್ನು ಉದಯ್ ಪುರ್ ನಿವಾಸಿ ರಾಜ್ ಕುಮಾರ್ ಗಯಾರಿ ಎಂದು ಗುರುತಿಸಲಾಗಿದೆ. ಗಯಾರಿ ತನ್ನ ಐಶಾರಾಮಿ ಕಾರನ್ನು ಕತ್ತೆಯ ಮೂಲಕ ಡೋಲು ಬಾರಿಸುತ್ತಾ ಎಳೆದೊಯ್ದಿರುವುದಾಗಿ ವರದಿ ತಿಳಿಸಿದೆ.